ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಯಲ್ಲಾಪುರದ ಕಳಚೆಯಲ್ಲಿ ಮತ್ತೆ ಭೂ ಕುಸಿತವಾಗಿದೆ. ಕುಸಿತದ ಪ್ರಮಾಣ ಸಣ್ಣದಾಗಿರುವುದರಿಂದ ದೊಡ್ಡ ಅನಾಹುತ ನಡೆದಿಲ್ಲ.
ನಾಲ್ಕು ವರ್ಷದ ಹಿಂದೆ ಕಳಚೆಯಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿತ್ತು. ಈ ವೇಳೆ ಮೈಮೇಲೆ ಮನೆ ಬಿದ್ದು ವೃದ್ಧೆಯೊಬ್ಬರು ಸಾವನಪ್ಪಿದ್ದರು. ಅದಾದ ನಂತರವೂ ಕಳಚೆಯ ವಿವಿಧ ಕಡೆ ಕುಸಿತ ಸಾಮಾನ್ಯವಾಗಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೆ ಅಲ್ಲಿ ಕುಸಿತವಾಗಿದೆ.
ಕಳಚೆಯ ಹೊಸಕುಂಬ್ರಿಯ ರಾಮಚಂದ್ರ ಭಟ್ಟ ಅವರ ಮನೆಯ ಹಿಂಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಕಳೆದ ತಿಂಗಳು ಮಳೆ ಜೋರಾಗಿದ್ದ ಅವಧಿಯಲ್ಲಿ ಸಹ ಈ ಭಾಗದಲ್ಲಿ ಧರೆಯ ಮಣ್ಣು ಕುಸಿದಿತ್ತು. ಪದೇ ಪದೇ ಕುಸಿತವಾಗುತ್ತಿರುವ ಕಾರಣ ಜನರ ಆತಂಕವೂ ಹೆಚ್ಚಾಗಿದೆ.
ಮೊನ್ನೆ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು ನಡೆಸಿದ ಸಭೆಯಲ್ಲಿಯೂ ಕಳಚೆಯ ಪರಿಸ್ಥಿತಿ ಪ್ರಸ್ತಾಪವಾಗಿದೆ. ಜನರ ಸ್ಥಳಾಂತರ ಹಾಗೂ ಪುನರ್ವಸತಿ ಬಗ್ಗೆ ಚರ್ಚೆ ನಡೆದಿದೆ.
