ಶುಕ್ರವಾರ ರಾತ್ರಿ ಸುರಿದ ಮಳೆಗೆ ಶಿರಸಿಯಲ್ಲಿದ್ದ ಮಣ್ಣಿನ ಮನೆಯೊಂದು ಸಂಪೂರ್ಣವಾಗಿ ನೆಲಸಮವಾಗಿದೆ. ಮನೆಯೊಳಗಿದ್ದ ಸಾಮಗ್ರಿಗಳೆಲ್ಲವೂ ಮಣ್ಣಿನಲ್ಲಿ ಹೂತು ಹೋಗಿದೆ.
ಶಿರಸಿಯ ಸಾಲ್ಕಣಿ ಬಳಿಯ ಶೀಗೆಹಳ್ಳಿಯಲ್ಲಿ ಮಹಾಲಕ್ಷ್ಮಿ ಹೆಗಡೆ ಅವರು ಒಂಟಿಯಾಗಿ ವಾಸಿಸುತ್ತಿದ್ದರು. ಪತಿ ಪರಮೇಶ್ವರ ಹೆಗಡೆ ಅವರ ಮರಣದ ನಂತರ ಅವರು ಏಕಾಂಗಿಯಾಗಿ ಬದುಕು ಕಳೆಯುತ್ತಿದ್ದರು. ನಾಲ್ಕು ಹೆಣ್ಣು ಮಕ್ಕಳನ್ನು ಹೊಂದಿದ ಅವರು ಶುಕ್ರವಾರ ಮಗಳ ಮನೆಗೆ ಹೋಗಿದ್ದರು. ಶನಿವಾರ ಬೆಳಗ್ಗೆ ಮನೆಗೆ ಬಂದಾಗ ಅಲ್ಲಿ ಅವರ ಮನೆಯೇ ಇರಲಿಲ್ಲ.
ರಾತ್ರಿ ಸುರಿದ ಧಾರಾಕಾರ ಮಳೆಗೆ ಮಹಾಲಕ್ಷ್ಮಿ ಹೆಗಡೆ ಅವರ ಮನೆ ಕುಸಿದು ಬಿದ್ದಿತ್ತು. ಮಣ್ಣಿನ ಮನೆ ಕುಸಿದಿದ್ದರಿಂದ ಮನೆಯೊಳಗಿನ ಬಟ್ಟೆ-ಪಾತ್ರೆಗಳೆಲ್ಲವೂ ರಾಡಿ ಅಡಿ ಸಿಲುಕಿದ್ದವು. ಮನೆಯೊಳಗೆ ಕಾಲಿರಿಸಿದರೆ ಮೊಣಕಾಲಿನವರೆಗೂ ಮಣ್ಣು ಹುಗಿಯುವ ಹಾಗಿತ್ತು. ಈ ವಿಷಯ ಅರಿತ ಗ್ರಾ ಪಂ ಹಾಗೂ ಕಂದಾಯ ಅಧಿಕಾರಿಗಳು ಸ್ಥಳ ಭೇಟಿ ಮಾಡಿದರು. ಆದರೆ, ಮನೆ ಕಳೆದುಕೊಂಡವರಿಗೆ ವಸತಿ ವ್ಯವಸ್ಥೆ ಮಾಡಲು ನಿರಾಕರಿಸಿದರು.
ಮಗಳ ಮನೆಗೆ ಹೋಗಿದ್ದರಿಂದ ಮನೆ ಕುಸಿದರೂ ಮಹಾಲಕ್ಷ್ಮಿ ಹೆಗಡೆ ಅವರು ಬದುಕಿದರು. ಆದರೆ, ಈ ಸಮಯದಲ್ಲಿ ಅವರಿಗೆ ಆಸರೆಯಾಗಬೇಕಿದ್ದ ಸರ್ಕಾರದಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ನೋವು ತೋಡಿಕೊಂಡರು.
