ಮುಂಡಗೋಡ:
ತಾಲೂಕಿನ ಕಾತೂರ ವಲಯದ ಪಾಳಾ ಕೊಡಂಬಿ ರಸ್ತೆಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು ಕೆಲ ಸಮಯ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.
ಒಂಟಿಸಲಗವೊಂದು ಈ ಭಾಗದಲ್ಲಿ ಓಡಾಡುತಿದ್ದು ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡ ಬಂದು ನಿಂತಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸಂಪೂರ್ಣ ಬಂದಾಗಿತ್ತು. ಕಾತೂರು ಅರಣ್ಯ ವಲಯದಿಂದ ಬಂದ ಈ ಗಜರಾಜನು ಪಾಳಾ ಕೊಡಂಬಿ ರಸ್ತೆಯ ನಡುಮಧ್ಯೆ ಬಂದು ನಿಂತು, ಯಾವುದೇ ಆತಂಕವಿಲ್ಲದೆ ಆರಾಮವಾಗಿ ವಿಶ್ರಾಂತಿ ಪಡೆಯಿತು. ಗ್ರಾಮೀಣ ಭಾಗಗಳಿಗೆ ತೆರಳಲು ಬಂದ ಸಾರ್ವಜನಿಕರು ಮತ್ತು ವಾಹನ ಸವಾರರು ಆನೆಯನ್ನು ನೋಡಿ ದಂಗಾಗಿ ಹೋಗಿದ್ದರು. ಭಯದಿಂದ ಯಾರೂ ಮುಂದುವರೆಯದೆ ರಸ್ತೆಯಲ್ಲೇ ನಿಂತಿದ್ದರು. ಆನೆ ಮಾತ್ರ ಜನ ಅಥವಾ ವಾಹನಗಳ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ, ರಸ್ತೆಯಲ್ಲೇ ನಿಂತು ನೆರೆದಿದ್ದ ಜನರನ್ನು ನೋಡುತ್ತಿತ್ತು. ಈ ಅನಿರೀಕ್ಷಿತ ಅತಿಥಿಯನ್ನು ನೋಡಲು ಜಮಾಯಿಸಿದ್ದ ಜನರು, ಸಮಯ ಕಳೆಯಲು ಮೊಬೈಲ್ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡರು. ನಂತರ, ತನ್ನಷ್ಟಕ್ಕೆ ತಾನೇ ನಿಧಾನವಾಗಿ ಅರಣ್ಯದ ಕಡೆಗೆ ಹೆಜ್ಜೆ ಹಾಕಿತು. ಆನೆಯು ಕಾಡಿನೊಳಗೆ ತೆರಳಿದ ಬಳಿಕವಷ್ಟೇ ಜನರು ತಮ್ಮ ಪ್ರಯಾಣವನ್ನು ಮುಂದುವರೆಸಿದರು.
