
ಮಂಗಳೂರು:
ಮಂಗಳೂರಿನ ಕಲ್ಲಚ್ಚು ಪ್ರಕಾಶನದ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಬಿ.ಎನ್. ವಾಸರೆಯವರಿಗೆ ಸಾಹಿತ್ಯ ಸಂಘಟನೆ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ‘ರಜತ ರಂಗು’ ಪ್ರಶಸ್ತಿ ನೀಡಿ ಗೌರವಿಸಿದರು.
ಕಲ್ಲಚ್ಚು ಪ್ರಕಾಶನಕ್ಕೆ 25 ವರ್ಷ ತುಂಬಿದ ನೆನಪಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 25 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳೂರಿನ ಓಷನ್ ಪರ್ಲ್ ಸುಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎನ್. ವಾಸರೆಯವರು ಇಂದಿನ ದಿನಮಾನದಲ್ಲಿ ಪ್ರಶಸ್ತಿಗಳು ಎಂದರೆ ಜನ ಸಂಶಯದಿಂದ ನೋಡುವಷ್ಟರ ಮಟ್ಟಿಗೆ ತಲುಪಿದೆ. ಅರ್ಜಿ ಹಾಕಿ, ಪ್ರಭಾವ ಬಳಸಿ ಪ್ರಶಸ್ತಿಯನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಕಲ್ಲಚ್ಚು ಪ್ರಕಾಶನದವರು ನಾಡಿನಾದ್ಯಂತ ಇರುವ ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಿಜಕ್ಕೂ ಅಭಿಮಾನ ತಂದಿದೆ. 150ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿರುವ ಕಲ್ಲಚ್ಚು ಪ್ರಕಾಶನದ ಬೆಳ್ಳಿ ಸಮಾರಂಭದ ಈ ‘ರಜತ ರಂಗು’ ಗೌರವ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಕಲ್ಲಚ್ಚು ಪ್ರಕಾಶನ ಮತ್ತು ಅದರ ಸ್ಥಾಪಕರಾದ ಮಹೇಶ್ ನಾಯಕರವರ ಸಾರ್ಥಕ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನವ ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ವಿಶ್ರಾಂತ ಉಪ ಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಎಸ್.ಪಿ. ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಪ್ರಭಾಕರ್ ನೀರಮಾರ್ಗರವರು ಕಲ್ಲಚ್ಚು ಮಹೇಶ್ ನಾಯಕ ಅವರ ಅನುಗೂಡುನು ಬಾ ಕೃತಿಯನ್ನು ಬಿಡುಗಡೆಗೊಳಿಸಿದರು. ಕುಂದಾಪುರದ ಸಂಪೂರ್ಣಾನಂದ ಬಳ್ಕೂರು ಕೃತಿ ಪರಿಚಯಿಸಿದರು. ಬೆಂಗಳೂರಿನ ಜಯಂತ್ ನಾಯಕ್, ಹಿರಿಯ ಸಾಹಿತಿ ಡಾ ಪ್ರಥ್ವಿರಾಜ್ ನಾಯಕ್, ಡಾ. ಸ್ಮಿತಾ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.
ಕಲ್ಲಚ್ಚು ಪ್ರಕಾಶನದ ಸಂಸ್ಥಾಪಕ ಮಹೇಶ್ ಆರ್. ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುಬ್ರಾಯ್ ಭಟ್ ನಿರೂಪಿಸಿದರು. ನಂತರ ಸಂಗೀತ ಕಾರ್ಯಕ್ರಮ ನಡೆಯಿತು.