ಕಾರವಾರ ಕಡಲತೀರವನ್ನು ಕೋಸ್ಟಗಾರ್ಡಿನವರು ಕಬಳಿಸುವ ಪ್ರಯತ್ನ ನಡೆಸಿದ್ದು, ಇದನ್ನು ವಿರೋಧಿಸಿ ಕಾರವಾರದ ಜನ ಪ್ರತಿಭಟನೆ ನಡೆಸಿದ್ದಾರೆ. `ಕಾರವಾರ ಕಡಲತೀರದ ಒಂದು ಇಂಚು ಜಾಗವನ್ನು ಬೇರೆಯವರಿಗೆ ಕೊಡುವುದಿಲ್ಲ’ ಎಂದು ಘೋಷಣೆ ಕೂಗಿದ್ದಾರೆ.
`ನಮ್ಮ ಹೋರಾಟ-ಎಚ್ಚರಿಕೆ ನಂತರವೂ ಕೋಸ್ಟಗಾರ್ಡಿನವರು ಕಾರವಾರ ಕಡಲತೀರಕ್ಕೆ ಬೇಲಿ ಹಾಕಿದರೆ ಉಗ್ರ ಪ್ರತಿಭಟನೆ ಅನಿವಾರ್ಯ’ ಎಂದು ಅಲ್ಲಿನವರು ಎಚ್ಚರಿಸಿದ್ದಾರೆ. `ಈಗಾಗಲೇ ವಿವಿಧ ಯೋಜನೆಗಳಿಗೆ ಭೂಮಿ ಕೊಟ್ಟು ಸಾಕಾಗಿದೆ. ಇದೀಗ ಕಾರವಾರ ನಗರದಲ್ಲಿರುವ ಏಕೈಕ ಕಡಲ ತೀರವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶದ ಮಾತುಗಳನ್ನಾಡಿದ್ದಾರೆ.
`ಕಾರವಾರದ ರವೀಂದ್ರನಾಥ ಕಡಲತೀರದ ದಿವೇಕರ್ ಕಾಲೇಜು ಹಿಂಭಾಗ ಕೋಸ್ಟ್ಗಾರ್ಡ್ ಕಟ್ಟಡ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಇದಕ್ಕೆ ಜಿಲ್ಲಾಡಳಿತ ಅನುಮತಿ ಕೊಡಬಾರದು’ ಎಂದು ಮೀನುಗಾರರು ಒತ್ತಾಯಿಸಿದ್ದಾರೆ. `ಕೋಸ್ಟಗಾರ್ಡ ಅಧಿಕಾರಿಗಳು ಜೆಸಿಬಿ ಯಂತ್ರ ತಂದು ಕಡಲತೀರದ ಗಿಡ ಕಟಾವು ಮಾಡಿದ್ದಾರೆ. ಈ ವೇಳೆ ಅಲ್ಲಿ ಕಟ್ಟಡ ನಿರ್ಮಾಣ ಸಿದ್ಧತೆ ನಡೆದ ಬಗ್ಗೆ ಮಾಹಿತಿ ಸಿಕ್ಕಿದ್ದು, ಅದಕ್ಕೆ ಮೀನುಗಾರರ ವಿರೋಧವಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.
`ದೇಶದ ರಕ್ಷಣಾ ಯೋಜನೆಗೆ ಕಾರವಾರ ಮತ್ತು ಅಂಕೋಲಾದ ಜನತೆ ಸುಮಾರು 11 ಸಾವಿರ ಎಕರೆ ಭೂಮಿ ಕೊಟ್ಟಿದ್ದಾರೆ. ಇದೀಗ ಇನ್ನಷ್ಟು ಭೂಮಿ ಕೊಡಲು ಸಿದ್ಧವಿಲ್ಲ. ಈ ಕಡಲತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುತ್ತಿದ್ದು, ಅದನ್ನು ನಿಲ್ಲಿಸಲು ಯಾರಿದಂಲೂ ಸಾಧ್ಯವಿಲ್ಲ’ ಎಂದು ಆಕ್ರೋಶದಿಂದ ಮಾತನಾಡಿದ್ದಾರೆ.
`ಈ ಪ್ರದೇಶದಲ್ಲಿ ತಟರಕ್ಷಕಪಡೆಯವರು ಹೋವರ್ ಕ್ರಾಫ್ಟ್ ನಿಲ್ಲಿಸಿದರೆ ಮೀನುಗಾರರಿಗೆ ಬಲೆ ಹಾಕಲು ಬೇರೆ ಜಾಗ ಸಿಗುವುದಿಲ್ಲ. ಆ ಪ್ರದೇಶ ಮೀನುಗಾರಿಕೆ ನಿಷೇಧ ವಲಯ ಆಗಲಿದ್ದು, ಜನರಿಗೂ ತಾಜಾ ಮೀನು ಸಿಗುವುದಿಲ್ಲ. ನಿತ್ಯದ ವಾಯು ವಿಹಾರಕ್ಕೆ ಸಹ ಇಲ್ಲಿ ಸ್ಥಳದ ಕೊರತೆ ಎದುರಾಗಲಿದೆ’ ಎಂದು ಆತಂಕವ್ಯಕ್ತಪಡಿಸಿದರು.
ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ವೆಂಕಟೇಶ ತಾಂಡೇಲ್, ಮೀನುಗಾರ ಮುಖಂಡ ಚೇತನ ಹರಿಕಂತ್ರ, ಸಂಜೀವ ಬಲೆಗಾರ್, ಸುಶೀಲಾ ಹರಿಕಂತ್ರ, ಪ್ರಶಾಂತ ಹರಿಕಂತ್ರ, ಮಂಜು ಟಾಕೇಕರ್, ಉದಯ ಬಾನಾವಳಿ ಸೇರಿ ಅನೇಕ ಮೀನುಗಾರರು ಪ್ರತಿಭಟನೆಯಲ್ಲಿದ್ದರು.
ಪ್ರತಿಭಟನೆಯ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..
Discussion about this post