ಹೊನ್ನಾವರದ ಪ್ರಸಿದ್ಧ ಇಡಗುಂಜಿ ದೇವಾಲಯಕ್ಕೆ ಸೇರಿದ ಅಡಿಕೆ ತೋಟದಲ್ಲಿ ಕಳ್ಳತನ ನಡೆದಿದೆ. ಅಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಕಳ್ಳರು ಅಪಹರಿಸಿದ್ದಾರೆ.
ಇಡಗುಂಜಿ ದೇವಾಲಯಕ್ಕೆ ಹೊಸ್ಕೇರೆಯಲ್ಲಿ 5 ಎಕರೆ ತೋಟವಿದೆ. ಕೊಳೆ ರೋಗ ಬಾರದಂತೆ ತಡೆಯಲು ಜುಲೈ ತಿಂಗಳ ಅವಧಿಯಲ್ಲಿ ಇಲ್ಲಿನ ಅಡಿಕೆ ಫಸಲಿಗೆ ಮದ್ದು ಹೊಡೆಯಲಾಗಿತ್ತು. ಈ ವೇಳೆ ಮರದಿಂದ ಬಿದ್ದ ಅಡಿಕೆಯನ್ನು ಹೆಕ್ಕಿ ಅಲ್ಲಿದ್ದ ತೋಟದ ಮನೆಯಲ್ಲಿ ದಾಸ್ತಾನು ಮಾಡಲಾಗಿತ್ತು.
ಜುಲೈ 28ರಂದು ಇಡಗುಂಜಿ ದೇವಸ್ಥಾನದ ಮಣಗಾರರಾಗಿರುವ ಗುಣವಂತೆ ಹೆಬ್ಬರಹಿತ್ಲದ ಮಣಿಕಂಠ ಗೌಡ ಅವರು ದಾಸ್ತಾನು ಮಾಡಿದ್ದ ಅಡಿಕೆಯನ್ನು ಪರಿಶೀಲಿಸಿದ್ದರು. 5 ಸಾವಿರ ರೂ ಮೌಲ್ಯದ ಅಂದಾಜು 2500 ಅಡಿಕೆಗಳು ಅಲ್ಲಿದ್ದವು. ಸೆಪ್ಟೆಂಬರ್ 11ರಂದು ಮಣಿಕಂಠ ಗೌಡ ಅವರು ತೋಟದ ಮನೆಗೆ ಹೋದಾಗ ಆ ಅಡಿಕೆ ಕಾಣಲಿಲ್ಲ.
ತೋಟದ ಮನೆಯ ಹಿಂದಿನ ಬಾಗಿಲು ಸಹ ಒಡೆದಿತ್ತು. ಕಳ್ಳರು ಬಾಗಿಲು ಒಡೆದು ಒಳಗೆ ಪ್ರವೇಶಿಸಿ ಅಡಿಕೆ ಕದ್ದಿರುವ ಬಗ್ಗೆ ಅವರಿಗೆ ಮನದಟ್ಟಾಯಿತು. ಹೀಗಾಗಿ ದೇವಾಲಯದ ಪರವಾಗಿ ಅವರು ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದರು.
Discussion about this post