ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಅಗಸ್ಟ 1 ಹಾಗೂ 2ರಂದು ವ್ಯಾಪಕ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಈ ಹಿನ್ನಲೆ ಅಗಸ್ಟ್ 2ರ ಶುಕ್ರವಾರ ಸಹ ವಿವಿಧ ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.
ಮಳೆ ಕಾರಣದಿಂದ ಮಕ್ಕಳಿಗೆ ಶಾಲೆಗೆ ತೆರಳಲು ಅಸಾಧ್ಯ ಎಂದು ಶಿಕ್ಷಣಾಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಹೀಗಾಗಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೊಯಿಡಾ ಹಾಗೂ ದಾಂಡೇಲಿ ತಾಲೂಕಿನ ಶಾಲೆಗಳಿಗೆ ಈ ರಜೆ ಘೋಷಣೆಯಾಗಿದೆ. ಈ ತಾಲೂಕಿನ ಅಂಗನವಾಡಿಗಳಿಗೂ ಈ ರಜೆ ಸಿಗಲಿದೆ. ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಜೊತೆ ಐಟಿಐ ಹಾಗೂ ಡಿಪ್ಲೋಮಾ ಕಾಲೇಜುಗಳಿಗೆ ಈ ರಜೆ ನಿಯಮ ಅನ್ವಯ. ಉಳಿದ ತಾಲೂಕುಗಳಲ್ಲಿ ಮಳೆ ಪ್ರಮಾಣ ಕಡಿಮೆ ಇರುವ ಕಾರಣ ಅಲ್ಲಿನ ಶಾಲೆಗಳಿಗೆ ಮಳೆ ರಜೆ ಇಲ್ಲ.