
ಜೋಯಿಡಾ :
ಪ್ರವಾಸಕ್ಕೆಂದು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದ ಖಾಸಗಿ ಬಸ್ಸೊಂದು ಜೋಯಿಡಾ ತಾಲೂಕಿನ ಗಣೇಶಗುಡಿಯ ಹತ್ತಿರ ಪಲ್ಟಿಯಾಗಿ ಬಸ್ಸಿನಲ್ಲಿದ್ದ 40 ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಗಾಯವಾದ ಘಟನೆ ಇಂದು ಮಧ್ಯಾನ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾದ ಸೇಂಟ್ ಅಂತೋನಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮೂರು ಖಾಸಗಿ ಬಸ್ಸಿನಲ್ಲಿ ದಾಂಡೇಲಿ – ಜೋಯಿಡಾಕ್ಕೆ ಪ್ರವಾಸಕ್ಕೆ ಬಂದಿದ್ದರು. ಇಂದು ಬೆಳಿಗ್ಗೆ ಗಣೇಶಗುಡಿಗೆ ತೆರಳಿ ಅಲ್ಲಿ ಜಲ ಸಾಹಸ ಚಟುವಟಿಕೆಗಳನ್ನು ನಡೆಸಿ, ಹಿಂದಿರುಗಿ ಬರುತ್ತಿದ್ದಾಗ ಗಣೇಶಗುಡಿ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಬಸ್ಸಿನಲ್ಲಿ ಸರಿ ಸುಮಾರು 50 ವಿದ್ಯಾರ್ಥಿಗಳಿದ್ದು, 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ತಕ್ಷಣವೇ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಭಗವತಿರಾಜ ಸೇರಿದಂತೆ ಗ್ರಾ.ಪಂ ಸದಸ್ಯರು ಮತ್ತು ಸ್ಥಳೀಯರು ಸೇರಿ, ಬಸ್ಸಿನಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದಿದ್ದಾರೆ. ತಕ್ಷಣವೇ ಗಾಯಗೊಂಡವರನ್ನು ಎರಡು ಆಂಬುಲೆನ್ಸ್ ಹಾಗೂ ಇನ್ನಿತರ ಖಾಸಗಿ ವಾಹನಗಳಲ್ಲಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ.