ದಾಂಡೇಲಿ :
ದಾಂಡೇಲಿ ರೈಲ್ವೆ ನಿಲ್ದಾಣದಲ್ಲಿ, ದಾಂಡೇಲಿ ಯಿಂದ ಅಳ್ನಾವರ ದವರೆಗೆ ಸಂಚರಿಸುವ ನೂತನ ರೈಲಿಗೆ ಹಸಿರು ನಿಶಾನೆ ತೋರಿಸಿ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿದರು.
ಅಂಕೋಲಾ -ಹುಬ್ಬಳ್ಳಿ ರೈಲು ಮಾರ್ಗವನ್ನು 17000 ಕೋಟಿ ವೆಚ್ಚದಲ್ಲಿ ಕೈಗೊಳ್ಳುವ ಕಾಮಗಾರಿ ಕುರಿತಂತೆ ತಯಾರಿ ನಡೆದಿದೆ ಶೀಘ್ರದಲ್ಲಿ ಅಗತ್ಯವಿರುವ ಎಲ್ಲಾ ಅನುಮತಿ ದೊರೆಯಲಿವೆ ಎಂದರು . ಅಳ್ನಾವರ- ದಾಂಡೇಲಿ ರೈಲನ್ನು ಹುಬ್ಬಳ್ಳಿ ವರೆಗೂ ವಿಸ್ತರಿಸಲಾಗುವುದು ಎಂದರು. ರಾಜ್ಯದಲ್ಲಿ 52,952 ಕೋಟಿ ವೆಚ್ಚದಲ್ಲಿ ರೈಲ್ವೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಸುಮಾರು 3,840 ಕಿ.ಮೀ ಹೊಸ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. 707 ಮೆಲ್ಸೇತುವೆ ಮತ್ತು ಕೆಳಸೇತುವೆ ಮಾಡಲಾಗಿದ್ದು, 61 ರೈಲ್ವೆ ನಿಲ್ದಾಣ ನವೀಕರಣ ಮಾಡಲಾಗುತ್ತಿದ್ದು ಹಲವು ರೈಲ್ವೆ ನಿಲ್ದಾಣಗಳನ್ನು ಉನ್ನತೀಕರಣ ಮಾಡಲಾಗುತ್ತದೆ ಎಂದು ಸಚಿವ ಸೋಮಣ್ಣ ನುಡಿದರು. ರಾಜ್ಯದಲ್ಲಿ ಈ ಹಿಂದೆ ಸಂಚರಿಸುತ್ತಿದ್ದು ಪ್ರಸ್ತುತ ಸ್ಥಗಿತಗೋಂಡಿರುವ ರೈಲುಗಳನ್ನು ಆದ್ಯತೆಯ ಮೇರೆಗೆ ಪುನಾರಂಭ ಮಾಡಲಾಗುವುದು ಎಂದು ಹೇಳಿದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಮಾತನಾಡಿ, ಹಿಂದೆ ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಪ್ರಯತ್ನದಿಂದ ಅಳ್ನಾವರ ದಾಂಡೇಲಿ ರೈಲು ಆರಂಭ ಗೊಂಡಿದ್ದು, ಈ ರೈಲನ್ನು ನಿರಂತರವಾಗಿ ಓಡಾಟ ನಡೆಸುವ ಉದ್ದೇಶದಿಂದ ಈ ರೈಲನ್ನು ಹುಬ್ಬಳ್ಳಿ ಅಥವಾ ಬೆಳಗಾವಿ ತನಕ ಸಂಪರ್ಕಿಸುವಂತೆ ಓಡಿಸಿ. ಭಾನುವಾರ ಕೂಡಾ ರೈಲು ಚಲಿಸಲು ಅವಕಾಶ ನೀಡಬೇಕು. ಈ ಹಿಂದೆ ಸ್ಥಗಿತವಾಗಿದ್ದ ಹುಬ್ಬಳ್ಳಿ ಪಂಡಾರಪುರ ನೇರ ರೈಲುಸೇವೆಯನ್ನು ಮತ್ತು ,ಸ್ಥಗಿತ ಗೊಂಡಿರುವ ಮಿರಜ್- ಕ್ಯಾಸಲ್ ರಾಕ್ ಪ್ರಯಾಣಿಕ ರೈಲು ಸೇವೆಯನ್ನು ಪುನರಾರಾಂಭಿಸಬೇಕು ಎಂದರು. ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳು ರಾಜ್ಯದ ಜನತೆಯ ಬಾಳಿನಲ್ಲಿ ನೆಮ್ಮದಿ ಮೂಡಿಸಿವೆ. ಶಕ್ತಿ ಮತ್ತು ಗೃಹಜ್ಯೋತಿ ಯೋಜನೆಗಳು ಮಹಿಳೆಯರು ಸಬಲರಾಗುವಂತೆ ಮಾಡಿವೆ. ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳು ಕೂಡಾ ಸಾರ್ವಜನಿಕರಿಗೆ ನೆರವಾಗಿದ್ದು, ಯುವನಿಧಿ ಯುವಜನತೆಗೆ ಉದ್ಯೋಗ ಪಡೆಯಲು ಸಹಕಾರಿಯಾಗಿವೆ ಎಂದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ತಾಳಗುಪ್ಪ – ಶಿರಸಿ – ಮುಂಡಗೋಡ – ಹುಬ್ಬಳ್ಳಿ ರೈಲು ಮಾರ್ಗದ ಸರ್ವೇ ಕೆಲಸ ಆಗಿದ್ದು, ಡಿಪಿಆರ್ ಹಂತದಲ್ಲಿದೆ. ದಾಂಡೇಲಿ ರೈಲ್ವೆ ನಿಲ್ದಾಣಕ್ಕೆ ಸಾರಿಗೆ ಬಸ್ ವ್ಯವಸ್ಥೆ ಆಗಬೇಕು ಎಂದರು . ಜಿಲ್ಲೆಯಲ್ಲಿ ಕೇಂದ್ರ ಯೋಜನೆಗಳನ್ನು ಜನತೆಗೆ ಪಕ್ಷಾತೀತವಾಗಿ ತಲುಪಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುನಿಲ್ ಹೆಗಡೆ, ರೂಪಾಲಿ ನಾಯ್ಕ, ಘೋಟ್ನೆಕರ್, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಹುಬ್ಬಳ್ಳಿ ವಿಭಾಗೀಯ ರೈಲ್ವೆಯ ಮೆನೇಜರ್ ಬೇಲಾಮೀನಾ, ಕೊಂಕಣ ರೈಲ್ವೆಯ ವಿಭಾಗೀಯ ಮೆನೇಜರ್ ಆಶಾ ಶೆಟ್ಟಿ,ಮುಖ್ಯ ವಾಣಿಜ್ಯ ಮೆನೇಜರ್ ಎಸ್. ಪಿ. ಶಾಸ್ತ್ರಿ, ತಹಸೀಲ್ದಾರ್ ಶೈಲೇಶ ಮತ್ತಿತರರು ಇದ್ದರು.
