ಮನಸ್ಸಿನಲ್ಲಿರುವ ಯಾವುದೇ ಪ್ರಶ್ನೆ-ಗೊಂದಲಗಳಿಗೆ ಶಿರಸಿಯ ದೊಡ್ಡ ಗಣಪತಿ ಬಳಿ ಹೋದರೆ ಅದಕ್ಕೆ ಪರಿಹಾರ ಶತಸಿದ್ಧ. ಹೀಗಾಗಿ ಈ ದೊಡ್ಡ ಗಣಪತಿ ದೇವಾಲಯ ಶಿರಸಿ ಜನಜೀವನದ ಅವಿಭಾಜ್ಯ ಅಂಗವಾಗಿದೆ.
ಸರಿ ಸುಮಾರು 400 ವರ್ಷಗಳಿಂದ ಶಿರಸಿಯಲ್ಲಿ ದೊಡ್ಡ ಗಣಪತಿ ದೇವಾಲಯವಿದೆ. ಆ ಕಾಲದಿಂದ ಈಗಿನವರೆಗೂ ಜೀವನದಲ್ಲಿ ಎದುರಾಗುವ ಎಲ್ಲಾ ಸಂಕಷ್ಟಗಳಿಗೆ ಇಲ್ಲಿನ ದೇವರು ಪರಿಹಾರ ಒದಗಿಸುತ್ತಿದ್ದು, ಹಬ್ಬ-ಹರಿದಿನಗಳಲ್ಲಿ ಇಲ್ಲಿ ಜಾತ್ರೆಯ ಸಂಭ್ರಮ ಕಾಣುತ್ತದೆ. ದೊಡ್ಡ ಗಣಪತಿ ದೇವಾಲಯ ಭಕ್ತಿಗೆ ಮಾತ್ರ ಸೀಮಿತವಾಗಿರದೇ ಶಿಲ್ಪಕಲೆಯಿಂದಲೂ ಗಮನಸೆಳೆಯುತ್ತದೆ.
`ಹೌದು ಅಥವಾ ಇಲ್ಲ’ ಎಂಬ ಪ್ರಶ್ನೋತ್ತರ ಪದ್ಧತಿ ಈ ದೇವಾಲಯದಲ್ಲಿದೆ. ಭಕ್ತರು ತಮ್ಮ ಮನಸ್ಸಿನಲ್ಲಿರುವ ಪ್ರಶ್ನೆಯನ್ನು ದೇವರಿಗೆ ಅರ್ಪಿಸಿದರೆ ಅಲ್ಲಿನ ಅರ್ಚಕರು ಪುರಾತನ ವಿಧಾನ ಅನುಸರಿಸಿ ಪ್ರಸಾದ ನೋಡುತ್ತಾರೆ. ಆ ನಂತರ ಗಣಪತಿಯ ಆಶಯವನ್ನು ಭಕ್ತರಿಗೆ ತಿಳಿಸುತ್ತಾರೆ. ಈ ಮೂಲಕ ಅನೇಕರು ತಮ್ಮ ಜೀವನದ ನಿರ್ಧಾರವನ್ನು ಈ ಪ್ರಸಾದ ಪರಂಪರೆಯ ಮೂಲಕ ಕೈಗೊಳ್ಳುತ್ತಾರೆ.
ಸೋಂದಾ ಸಾಮ್ರಾಜ್ಯದ ಅಧಿಪತಿಯ ಕಾಲದಲ್ಲಿ ಈ ದೇವಾಲಯ ನಿರ್ಮಾಣ ನಡೆದಿದ್ದು, ದೇಗುಲದ ಆವರಣ ಪ್ರವೇಶಿಸಿದ ಕೂಡಲೇ ಹೊಯ್ಸಳ ಶೈಲಿಯ ವಾಸ್ತುಶಿಲ್ಪ ಗೋಚರವಾಗುತ್ತದೆ. ಕ್ರಮೇಣ ದೇಗುಲ ವ್ಯಾಪ್ತಿಯನ್ನು ಅನೇಕ ಪುನರ್ ನಿರ್ಮಾಣ ಕೆಲಸ ನಡೆದಿದ್ದರೂ ಪ್ರಾಚೀನ ಶೋಭೆ ಹಾಗೇ ಉಳಿದಿದೆ. ಶಿರಸಿ ನಗರದ ಹೃದಯಭಾಗದಲ್ಲಿ ಈ ದೇಗುಲವಿರುವುದರಿಂದ ಸದಾ ಜನರಿಂದ ತುಂಬಿದ್ದು, ಇಲ್ಲಿ ನಿತ್ಯ ಮುಂಜಾನೆ 7ರಿಂದ 1 ಹಾಗೂ ಸಂಜೆ 5ರಿಂದ 8ಗಂಟೆಯವರೆಗೂ ಜನರ ಅಹವಾಲು ಆಲಿಸಲು ಆರು ಅಡಿ ಎತ್ತರದ ಗಣಪ ಸಿದ್ಧ.
ಗಣಪನ ಮೂರ್ತಿಯ ಭವ್ಯತೆಯಿಂದಲೇ ಈ ದೇಗುಲಕ್ಕೆ ದೊಡ್ಡ ಗಣಪತಿ ದೇವಾಲಯ ಎಂಬ ಹೆಸರು ಬಂದಿದೆ. ಮೂರ್ತಿಯ ಮುಖದಲ್ಲಿ ಕಾಣುವ ಶಾಂತಾಭಾವ ಮತ್ತು ದೇಹದಲ್ಲಿ ವ್ಯಕ್ತವಾಗುವ ಬಲದ ಪ್ರತೀಕವೂ ಭಕ್ತರಲ್ಲಿ ಭರವಸೆಯನ್ನು ಮೂಡಿಸುತ್ತದೆ. ಭಕ್ತರಿಗೆ ನಿರಂತರ ಶ್ರದ್ಧಾ-ಭಕ್ತಿ ತುಂಬಿಸುವ ಈ ದೇವಾಲಯವೂ ಶಿರಸಿಯನ್ನು ದೇಶದ ನಕ್ಷೆಯಲ್ಲಿ ವಿಶಿಷ್ಟವಾಗಿ ಕಾಣಿಸುತ್ತದೆ. ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಈ ಗಣಪತಿ ದಕ್ಷಿಣಾಮೂರ್ತಿ ಎಂದು ಪ್ರಸಿದ್ಧವಾಗಿದೆ. ಮಲೆನಾಡಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಮೃದ್ಧಿಗೆ ದೊಡ್ಡ ಗಣಪತಿ ದೇಗುಲ ಸಾಕ್ಷಿಯಾಗಿ ನಿಂತಿದೆ.
ಲೇಖಕರು:
ಡಾ ರವಿಕಿರಣ ಪಟವರ್ಧನ
ಆಯುರ್ವೇದ ವೈದ್ಯರು, ಶಿರಸಿ
Discussion about this post